ಶ್ರೀಲಂಕಾ ಸಮುದ್ರ ಭಾಗದಲ್ಲಿ ಹೊತ್ತಿ ಉರಿದ ತೈಲ ಟ್ಯಾಂಕರ್: ಕೇರಳ ತೀರದಲ್ಲಿ ಕಟ್ಟೆಚ್ಚರ

 

ಶ್ರೀಲಂಕಾ ಸಮುದ್ರ ಭಾಗದಲ್ಲಿ ಹೊತ್ತಿ ಉರಿದ ತೈಲ ಟ್ಯಾಂಕರ್: ಕೇರಳ ತೀರದಲ್ಲಿ ಕಟ್ಟೆಚ್ಚರ

ಕೊಲಂಬೋ, ಸೆಪ್ಟೆಂಬರ್ 4: ಕುವೈತ್‌ನಿಂದ ಭಾರತಕ್ಕೆ ತೈಲ ಹೊತ್ತು ತರುತ್ತಿದ್ದ ನೌಕೆಯೊಂದು ಶ್ರೀಲಂಕಾದ ಪೂರ್ವ ಕರಾವಳಿ ಸಮೀಪ ಹೊತ್ತಿ ಉರಿದ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ನೌಕೆಯಲ್ಲಿದ್ದ 23 ಸಿಬ್ಬಂದಿ ಪೈಕಿ ಒಬ್ಬರು ಕಣ್ಮರೆಯಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಈ ಸಂಬಂಧ ಕೇರಳ ತನ್ನ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ (ಐಒಸಿ) ಪನಾಮಾ ನೋಂದಣಿಯ ಆಯಿಲ್ ಟ್ಯಾಂಕರ್ 'ನ್ಯೂ ಡೈಮಂಡ್' 2,70,000 ಮೆಟ್ರಿಕ್ ಟನ್‌ನಷ್ಟು ಕಚ್ಚಾ ತೈಲವನ್ನು ಕುವೈತ್‌ನಿಂದ ಭಾರತಕ್ಕೆ ಹೊತ್ತು ತರುತ್ತಿತ್ತು. ಪೂರ್ವ ಜಿಲ್ಲೆ ಅಂಪಾರದಲ್ಲಿ ಸಂಘಮಂಕಂದ ಕರಾವಳಿ ಸಮೀಪ ಅದರ ಎಂಜಿನ್ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದರ ಸರಕು ಪ್ರದೇಶಕ್ಕೆ ಯಾವುದೇ ಹಾನಿಯಾಗಿಲ್ಲ.
ಸಮುದ್ರದಲ್ಲಿ ತೈಲ ಸೋರಿಕೆಯಾಗಿದ್ದರೆ ತನ್ನ 600 ಕಿ.ಮೀ ಚದರ ಕರಾವಳಿ ಪ್ರದೇಶಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇರುವುದರಿಂದ ಘಟನೆಯ ಬಗ್ಗೆ ವಿವರವಾದ ಮಾಹಿತಿ ನೀಡುವಂತೆ ಭಾರತ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರಕ್ಕೆ (ಐಎನ್‌ಸಿಒಐಎಸ್) ಕೇರಳ ಸರ್ಕಾರ ಕೋರಿದೆ. ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಸಂಬಂಧ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಪ್ರಾಥಮಿಕ ಅಧ್ಯಯನ ಪ್ರಕಾರ ಸಮುದ್ರಕ್ಕೆ ಸೋರಿಕೆಯಾದ ತೈಲವು ಶೀಘ್ರದಲ್ಲಿಯೇ ಕೇರಳ ತೀರಕ್ಕೆ ತಲುಪಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ. ಸಮುದ್ರದ ಪ್ರಸ್ತುತ ಚಲನೆಯ ದಿಕ್ಕು ಮತ್ತು ಗಾಳಿಯ ವೇಗವನ್ನು ಇದು ಅವಲಂಬಿಸಿದೆ. ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿದ್ದರೆ ರಾಜ್ಯದ ಮೀನುಗಾರಿಕೆ ವಲಯ ಹಾಗೂ ಪರಿಸರಕ್ಕೆ ಅಪಾರ ಹಾನಿಯಾಗಲಿದೆ. ತೈಲ ಸೋರಿಕೆ ಸಂಕಷ್ಟ ಸಂಭವಿಸಿದರೆ ಅದನ್ನು ಎದುರಿಸುವ ಯಾವುದೇ ವ್ಯವಸ್ಥೆ ಕೇರಳದಲ್ಲಿಲ್ಲ.
ಕೂಡಲೇ ಸಮುದ್ರದ ಭಾಗಕ್ಕೆ ಧಾವಿಸಿದ ಶ್ರೀಲಂಕಾ ನೌಕಾಪಡೆ ಬೆಂಕಿಯನ್ನು ನಂದಿಸಿ ಸಿಬ್ಬಂದಿಯನ್ನು ರಕ್ಷಿಸಿದೆ. ಹೆಚ್ಚಿನ ಅನಾಹುತ ಸಂಭವಿಸದಂತೆ ಅದು ತಡೆದಿದೆ. ಫಿಲಿಪ್ಪೈನ್ ಮೂಲದ ಒಬ್ಬ ಸಿಬ್ಬಂದಿ ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡ ಮತ್ತೊಬ್ಬ ಫಿಲಿಪ್ಪೈನ್ ಪ್ರಜೆಯನ್ನು ರಕ್ಷಿಸಲಾಗಿದೆ. ಅವರನ್ನು ಕಲ್ಮುನೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶ್ರೀಲಂಕಾದ ನೌಕಾಪಡೆ ತಿಳಿಸಿದೆ. ನೌಕಾ ಪಡೆಗಳು ಟ್ಯಾಂಕರ್‌ನ ನಾಯಕ ಮತ್ತು ಇತರೆ ಸಿಬ್ಬಂದಿಯನ್ನು ರಕ್ಷಿಸಿದೆ. ಅವರ ದೇಶದ ವಿವರಗಳನ್ನು ಬಹಿರಂಗಪಡಿಸಿಲ್ಲ.


Comments